ಪುಟಗಳು

ಭಾನುವಾರ, ಅಕ್ಟೋಬರ್ 27, 2013

ಮಳೆ


ಬಾನಂಗಳದಿ ಕಪ್ಪು ಛಾಯೆ 
ಮೋಡಗಳಲ್ಲ ಅದು ಸೃಷ್ಟಿಕರ್ತನ ಮಾಯೆ 
ಸಾಲು ಸಾಲಿನಲಿ ಹಿಂದಿಂದೆ ಒಂದೊಂದು 
ನೂಕು ನುಗ್ಗಾಟ ನಡೆಸಿವೆ  ಬಾನಲಿ ಇಂದು।।

ಬಹು ದೂರದಿಂದ ಸಾಗಿ ಬಂದಂತೆ 
ಯಾಕೋ ತೀರ ಸುಸ್ತಾಗಿ ನಿಂತಂತೆ
ಹೊಂಚು ಹಾಕಿದವು ಎಲ್ಲ ಭುವಿಗಿಳಿಯಲು 
ಒಂದೈದು ಕ್ಷಣ ವಿಶ್ರಾಂತಿ ಪಡೆಯಲು।।

ಅದನು ಕಂಡ  ಭೂ ಮಾತೆ ಕರೆಯುತ ಕೈ ಚಾಚಿ 
ಬಾಚಿ ತಬ್ಬಲು ಬಂತು ಮೋಡವದು ತುಸು ನಾಚಿ
ಹನಿಗಳ ಸರಮಾಲೆ ಭುವಿಯತ್ತ ಧುಮುಕುತಲಿ
ಭೂ ರಮೆಯು ಆನಂದದಿ ನಲಿಯುತ ಕುಣಿಯುತಲಿ।।

ಕ್ಷಣದಲ್ಲೇ ಎಲ್ಲೆಲು ಹಸಿರ ಕ್ರಾಂತಿ 
ನೋಡಿದರೆ ಸಾಕು ನಯನಕೆ ಶಾಂತಿ 
ಭೂ ಮಾತೆಯೇ ನಿನಗೆ ತಾಕುವುದು ದೃಷ್ಟಿ 
ಸಲಾಮು ಹೊಡೆಯಲೇಬೇಕು ಏನಿಂತ ಸೃಷ್ಟಿ।।

ಏನು ಅಡಗಿದೆಯೋ ಆ ಒಂದು ಹನಿಯಲಿ 
ಭಗವಂತನ ಆನಂದದ  ಭಾಷ್ಪದಲಿ 
ಎಷ್ಟು  ಕಂಡರು ಸಾಲದು ಭುವಿಯ ಈ ದಿವ್ಯ ಕಳೆ 
ಹೀಗೆಯೇ ದಿನವು ಆಗುತಿರಲಿ ಮಳೆ ।।
---
ಗುರುರಾಜ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ