ಒಲ್ಲದ ಮನಸ್ಸು , ನಿಲ್ಲದ ವಯಸ್ಸು
ಕನಸಿನ ಬೆಂಬಲ ,ಮನೆಯವರ ಹಂಬಲ
ಎಲ್ಲವೂ ಕೂಡಿ ಕರೆದೊಯ್ದವು ಅವಳೂರಿಗೆ
ನನ್ನ ಮಡದಿಯಾಗ ಬೇಕಿದ್ದವಳ ತವರೂರಿಗೆ||
ತಳಿರು ತೋರಣ ರಂಗೋಲಿಗಳ ಸ್ವಾಗತ
ಮಕ್ಕಳು ಕುಣಿದವು ಅಕ್ಕನ ಗಂಡ ಬಂದನೆನ್ನುತ
ಅವಳ ಮನೆಯಲ್ಲಿ ಮುಗಿಲು ಮುಟ್ಟಿತ್ತು ಸಂಭ್ರಮ
ನನ್ನ ಮೂಗಿಗೆ ಬಡಿದಿತ್ತು ಕೇಸರಿಬಾತಿನ ಘಮ ಘಮ||
ಎದೆಯಲ್ಲಿ ಅವಳ ಕಲ್ಪನೆ ನಾಲಿಗೆಗೋ ಉಪ್ಪಿಟ್ಟಿನ ಯೋಚನೆ
ಗೆಜ್ಜೆಯ ಮೇಳದೊಂದಿಗೆ ಅವಳು ಬಂದಳು ಮೆಲ್ಲನೆ
ಕಂಡೊಡನೆಯೆ ಮೈಯೆಲ್ಲಾ ವಿದ್ಯುತ್ ಹರಿದಾಟ
ಎಂದಿಗೂ ಮರೆಯಲಾರೆ ಅವಳ ಆ ವಾರೆನೋಟ ||
ನಮ್ಮಿಬ್ಬರನು ಕಳುಹಿಸಿ ಕೊಟ್ಟರು ಮಹಡಿಯ ಮೇಲೆ
ಹಂಚಿಕೊಳ್ಳಲು ತಂತಮ್ಮ ಮನಸಿನ ಓಲೆ
ತೆರೆದಿಟ್ಟಳು ಬಾಳ ಪುಟವ ಆ ಚೆಲುವೆ
ಕಂಬನಿಯೊಂದಿಗೆ ಹೇಳಿದಳು ಇಷ್ಟವಿಲ್ಲ ನನಗೀ ಮದುವೆ||
ಕಾರಣ ಕೇಳಿದಾಗ ಕೊಟ್ಟಳವಳು ಉತ್ತರ
ನೀವು ಬೇಡುವ ಹೃದಯವೇ ಇಲ್ಲ ನನ್ನ ಹತ್ತಿರ
ನನ್ನ ಹೃದಯ ಕೋಟೆಗೆ ಬೇರೊಬ್ಬನು ಹಾಕಿರುವನು ಕನ್ನ
ಅವನ ಬಿಟ್ಟು ಬಾಳಲಾರೆ ಕ್ಷಮಿಸಿ ಬಿಡಿ ನನ್ನ ||
ಆ ಕ್ಷಣದಲ್ಲಿ ನೆನಪಾದವಳು ನನ್ನ ಮೊದಲ ಪ್ರೀತಿ
ಹಣದ ಹಿಂದೆ ಹೋದವಳು ಇರಬಾರದಿತ್ತ ಇವಳ ರೀತಿ
ಚೆನ್ನಾಗಿ ಬಾಳಿ ಎಂದು ಹರಸಿ ಹೇಳಿದೆ ಅವಳಿಗೆ ನಮಸ್ಕಾರ
ಮನಸ್ಸು ಕೂಗಿ ಹೇಳಿತು ಯೋಚಿಸದಿರು ಅಣ್ಣ ಹೊಸತಲ್ಲ ನಿನಗೀ ತಿರಸ್ಕಾರ||
--ಗುರುರಾಜ
(Techmahindra ಕಾವ್ಯ ಸುಧೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕವಿತೆ)