ಬಂದಿತೊಂದು ಶುಕ್ರವಾರ
ಕೈಯಲ್ಲಿ ಏಕೋ ಅರಿಶಿನ ದಾರ
ನನ್ನ ಕಡೆಯೇ ವಾಲಿತೊಂದು ಕತ್ತು
ಮರುಕ್ಷಣ ಮೂರು ಗಂಟು ಬಿತ್ತು।।
ಇಷ್ಟು ದಿನ ನಾನೊಬ್ಬ ಬ್ರಹ್ಮಚಾರಿ
ಆಗಿದ್ದೆ ಬರಿ ಸಂತೋಷದ ವ್ಯಾಪಾರಿ
ಮನೆಯವರಿಗೆ ಮಾತ್ರ ನಾನು ಒಂಟಿ ಸಲಗ
ಒತ್ತಾಯದ ಮೇರೆಗೆ ಊದಿಸಿದರು ವಾಲಗ।।
ಕನಸುಗಳ ಮೂಟೆಯೊತ್ತ ಯುವಕ
ಕಾಣದ ಜಗತ್ತು ನೋಡುವ ತವಕ
ಕಟ್ಟುವಷ್ಟರಲ್ಲಿ ಸಮಾನ ವಯಸ್ಕರ ಮಂಡಳಿ
ಅವಳ ಜಾತಕದ ಜೊತೆ ಕೂಡಿತು ನನ್ನ ಕುಂಡಲಿ।।
ತಾಳ ತಪ್ಪಿದ ಹಾಗೆ ನಾಡಿ ಮಿಡಿತ
ಅಷ್ಟು ಗಟ್ಟಿಯಾಗಿದೆ ಈ ಬಾಸಿಂಗದ ಹಿಡಿತ
ಒಂದೇ ಪ್ರಶ್ನೆ ಹೀಗಲು ಕಾಡುತ್ತಿರುವುದು ಅದುವೇ
ಬೇಕಿತ್ತಾ ಹೇಳಿ ನನಗೀ ಮದುವೆ ।।
--
ಗುರುರಾಜ