ಜಗತ್ತೇ ಮದಿರೆಯ ಗುಂಗಲ್ಲಿ
ಮುಳುಗಿರಲು
ನಾ ಇಂದು ಬರಬೇಕಿದ್ದ
ಪ್ಲoಬರ್ ರಾಮಣ್ಣ ಯಾಕೆ
ಬರಲಿಲ್ಲ ಎಂದು ಯೋಚಿಸುತ್ತಿದ್ದೆ||
ಹೊಸ ವರುಷದ ನೆಪದಲ್ಲಿ
ಎಲ್ಲರು ರಜೆಯನ್ನು ಸವಿದಿರಲು
ನಾ ಬಟ್ಟೆಗೆ ತಾಕಿದ
ಕರಿ ಬಣ್ಣದ
ಕಲೆಯನ್ನ ತಿಕ್ಕುತ್ತಿದ್ದೆ||
ಕೆಲವರು ಗೋವಾದ ಬೀಚಲ್ಲಿ
ಬರ್ಮುಡಾ ತೊಟ್ಟು
ಸೆಲ್ಫಿ ತೆಗೆದಿರಲು
ನಾನಿಲ್ಲಿ ಕೇರಳದ ಲುಂಗಿ ತೊಟ್ಟು
ಅಗ್ನಿಸಾಕ್ಷಿ ನೋಡುತ್ತಿದ್ದೆ||
ಎಲ್ಲೆಡೆ ಹರ್ಷದ ಚೀರಾಟ
ಪಟಾಕಿಗಳ ಶಬ್ಧ ಮುಗಿಲು ಮುಟ್ಟಲು
ನಾ ಹೊದಿಕೆಯ ಸಂಧಿಯಲ್ಲಿ
ಸುಯ್ ಎಂದು ಬೀಸುತ್ತಿದ್ದ
ಗಾಳಿಯ ಮೂಲ ಹುಡುಕುತ್ತಿದ್ದೆ ||
ಮಾರನೆಯ ದಿನ ಕುಡಿದ ಮತ್ತಲ್ಲಿ ಬೆಳಗ್ಗೆ
ಕೆಲವರು ಹತ್ತಾದರು ಏಳದಿರಲು
ನಾ ಆರಕ್ಕೆ ಎದ್ದು ಅದ್ಯಾವುದೊ
ಬ್ಯಾಂಕಿನ ಕ್ಯಾಲೆಂಡರ್ ಗೋಡೆಗೆ
ತಗಲಾಕಿ ಹೊಸ ವರ್ಷ ಆಚರಿಸಿದ್ದೆ ||
------
ಗುರುರಾಜ್ ಎಂ ಜೆ