ಪುಟಗಳು

ಶುಕ್ರವಾರ, ಆಗಸ್ಟ್ 14, 2020

ಆಂಡ್ರಾಯ್ಡ್ ಕುಂಜಪ್ಪ













ಯಾಂತ್ರಿಕತೆಯ ಬದುಕಲ್ಲಿ
ಯಕಶ್ಚಿತ್ ಒಂದು ಯಂತ್ರ ನೀನು
ಆದರೂ ನನ್ನ ನಿನ್ನ ನಡುವೆ
ಅರಿಯದ ಈ ಸಂಬಂಧವೇನು 

ನಿನಗೆ ಭಾವನೆಗಳಿಲ್ಲದಿದ್ದರೂ 
ನನ್ನೆಲ್ಲಾ ಭಾವನೆಗಳಿಗೆ ಸ್ಪಂದಿಸುವೆ
ನಗಬೇಕೆಂದಾಗ ನಗಿಸುವೆ
ಕಲಿಯಬೇಕೆಂದಾಗ ಕಲಿಸುವೆ

ನಮಗೆ ಬದುಕಲು ಬೇಕು
ನಿದ್ದೆ,ಊಟ ಒಂದಷ್ಟು ಬುದ್ಧಿ ಶಕ್ತಿ
ನಿನಗೋ ದಿನಕ್ಕೊಮ್ಮೆ 
ಅಥವಾ ಎರಡು ಬಾರಿ ಒಂದಿಷ್ಟು ವಿದ್ಯುಚ್ಛಕ್ತಿ 

ನೀ ಕ್ಷಣ ಕಾಲ ಮರೆಯಾಗಲು
ನಾನಾಗುವೆ ನಿತ್ರಾಣ
ನನಗರಿವಿರದಂತೆ ಅವಲಂಬಿತವಾಗಿದೆ
ನಿನ್ನ ಮೇಲೆ ನನ್ನ ಬದುಕ ಯಾನ

ಅದೆಷ್ಟೋ ಒಂಟಿ ಮನಗಳಿಗೆ
ನಿನ್ನ ಸಖ್ಯವೆ ನಾಕ
ಜಗವನೆ ಮರೆವರು 
ಬೇಡವೆ ಬೇಡ ಇನ್ಯಾವ ಲೋಕ


ಕಾಲ ಚಕ್ರ ಉರುಳಲು
ಎಲ್ಲರು ಬದಲಾಗಬೇಕಪ್ಪ
ಎಲ್ಲರ ಜೊತೆ ಕೊನೆಗೂಬ್ಬನೆ ಉಳಿವನು
ಅವನೆ ಆಂಡ್ರಾಯ್ಡ್ ಕುಂಜಪ್ಪ...

ಗುರುರಾಜ್ ಎಂ ಜೆ

ಭಾನುವಾರ, ಜನವರಿ 12, 2020

ಅಜ್ಜ

Image result for grandfather sketch

ಹಿಂದೊಮ್ಮೆ ಅಜ್ಜನ ಮನೆಗೆ 
ಬೇಸಿಗೆ ಕಳೆದು
ಮುಂಗಾರು ಕಾಲಿಡುವ ಹೊತ್ತಿಗೆ 
ನಾ ಹೋಗಿದ್ದ ನೆನಪು ।।

ಸಂಜೆ ಅಜ್ಜನೊಂದಿಗೆ ಪೇಟೆಗೆ ಹೋಗಿ 
ರಾತ್ರಿ ಬರುವ ಹೊತ್ತಿಗೆ ಕತ್ತಲಾಗಿ 
ಅಜ್ಜ ಹಿಡಿದ ಟಾರ್ಚಿನ ಬೆಳಕಲ್ಲಿ 
ಬೆಳಕಿನ ಮಹತ್ವ ಅರಿತಿದ್ದ ನೆನಪು।।

ರಾತ್ರಿ ಮಲಗಿದ್ದಾಗ 
ಮುಂಗಾರಿನ ಮೊದಲ ಮಳೆಗೆ ಎಚ್ಚರವಾಗಿ  
ಒಡೆದ ಅಂಚಿನಿಂದ  ನೀರು ತೊಟ್ಟಿಕ್ಕುವಾಗ  
ಅದರಡಿ ಅರ್ಧ ಒಡೆದ  ಸುಣ್ಣದ ಡಬ್ಬಿ  ಇಟ್ಟಿದ್ದ  ನೆನಪು ।।

ಮರುದಿನ ನೆರೆ ಮನೆ ಹುಡುಗನ 
ಜೊತೆ ಸಮುದ್ರಕೆ ಹೋಗುವೆನೆಂದಾಗ 
ಸಮುದ್ರದ ಬದಿ ಹೋಪ್ದು ಬೇಡ 
ಕಡಲ್ಕೊರೆತವಂತೆ ಎಂದು ಅಜ್ಜ ಗದರಿದ ನೆನಪು ।।

ಇಂದು ಸುಮಾರು ಇಪ್ಪತ್ತೈದು ವರ್ಷಗಳ 
ನಂತರ ಅದೇ ಪೇಟೆಗೆ ಹೋಗಿ 
ಮರಳಿ ಬರುವಾಗ ಕಂಡ ಸುತ್ತ ಬೀದಿ ದೀಪಗಳ ನಡುವೆ 
ಕಾಡಿದ್ದು ಆ  ಕಡು ಕತ್ತಲ  ನೆನಪು ।।

ರಾತ್ರಿ ಮಲಗಿದ್ದಾಗ 
ಮತ್ತದೆ ಮುಂಗಾರಿನ ಮಳೆಗೆ ಎಚ್ಚರವಾಗಿ 
ಮೇಲೆ ನೋಡಿದಾಗ ಕಂಡ ತಾರಸಿಯ ಮರೆಯಲ್ಲಿ 
ಕಾಡಿದ್ದು ಒಡೆದ ಅಂಚಿನ ನೆನಪು।।

ಮತ್ತದೆ  ನೆರೆಮನೆಯವನ ಜೊತೆ ಕಡಲೆಡೆಗೆ ಹೊರಟಾಗ 
 ಇದ್ದದ್ದು ಅದೇ ಕಡಲು ಅದೇ ಕಡಲ್ಕೊರೆತ 
ಆದರೆ ಸಮುದ್ರದ ಬದಿ  ಹೋಪ್ದು ಬೇಡ 
ಎಂದ ಗದರುವ  ಅಜ್ಜ ಮಾತ್ರ ಇಂದು ಬರಿ ನೆನಪು ।।

-----
ಗುರುರಾಜ್ ಎಂ ಜೆ 

ಶನಿವಾರ, ಸೆಪ್ಟೆಂಬರ್ 7, 2019

ಮತ್ತೊಮ್ಮೆ ಶಿವನಾಗಬೇಕು

Image result for sivan announcing
ಪಥವದು ಸತ್ಯಸಂತರು ನಡೆದ್ದದ್ದು
ಅದೆಷ್ಟೋ ವಿಜ್ಞಾನ  ಯೋಗಿಗಳು  ಮೆರೆದದ್ದು
ಬಾಹ್ಯಾಕಾಶವನು ಅಲ್ಲೇ  ಸಾಕಿ ಸಲುಹಿದ್ದು
ಪೃಥ್ವಿ ಮಂಗಳನೊಂದಿಗೆ ಅಲ್ಲೇ ಸಂಬಂಧ ಬೆಳೆಸಿದ್ದು ।।

ಅಲ್ಲಿ, ಅದೆಷ್ಟೋ ಕಂಬನಿಗಳು ಮಿಡಿದಿರಬಹುದು
ಸಾವಿರಾರು ಕನಸುಗಳು ಚೂರಾಗಿರಬಹುದು
ಲಕ್ಷಾಂತರ ಜನರಿಗೆ ಒಳ್ಳೆಯ  ಪಾಠ ಕೂಡ ಕಲಿಸಿರಬಹುದು
 ಪ್ರಕೃತಿ ಮುಂದೆ ತಾನೊಬ್ಬ ಕುಬ್ಜ ಎಂದರಿತಿರಬಹುದು।।

ಅಲ್ಲಿ, ಅದೆಷ್ಟೋ ಆಕಾಂಕ್ಷೆಗಳು ಚಿಗುರೊಡೆದಿರಬಹುದು
ಕಾಣಿಸದ ದಿಗಂತದ ದಾರಿ ಕಂಡಿರಬಹುದು
ಕೋಟ್ಯಾಂತರ ಸ್ಫೂರ್ತಿ ಚಿಲುಮೆಯೊಡೆದಿರಬಹುದು
ನಾನೊಬ್ಬ ಭಾರತೀಯನೆಂದು ಹೆಮ್ಮೆ ಪಟ್ಟಿರಬಹುದು ।।

ಜೀವನವೆಂದರೆ  ಅಷ್ಟೆ,  ಏಳುಬೀಳುಗಳ ಆಗರ
ಇಂದು ಭೂಮಿಗೆ ಬಿದ್ದವ ಧೂಳ್ಗೆಡವಿ
ಮತ್ತೆ ಏರಲೇ  ಬೇಕು , ಮೇಲೇಳಲೆ ಬೇಕು
ಸೋಲಿನ ಮುನ್ನುಡಿಯಲಿ ಯಶಸ್ಸಿನ ಪುಸ್ತಕ ಬರೆಯಲೇಬೇಕು||

ನೀನು,  ಕುಗ್ಗದೆ , ಮತ್ತೊಮ್ಮೆ  ಶಿವನಾಗಬೇಕು
ಶಿವನಾಗಿ ಮೇಲೆದ್ದು , ಅಲ್ಲೇ ಬಿದ್ದಿರುವ
ಆ ಚಂದ್ರನ ಚೂರನ್ನುಒಂದೊಮ್ಮೆ ಮುತ್ತಿಕ್ಕಿ
ನಿನ್ನ ಶಿರಕ್ಕೆ ಮುಡಿಯಬೇಕು ।।


-----
ಗುರುರಾಜ್ ಎಂ ಜೆ

ಬುಧವಾರ, ಆಗಸ್ಟ್ 7, 2019

ಮುಂಗಾರು

ಅಯ್ಯೋ  ಏನು ಮಳೆ
ಏನು ಪ್ರತಾಪ
ಬೇಕಿತ್ತಾ ಈ ಮುಂಗಾರು??

ರೈತನ ಬತ್ತಿದ ಕಂಗಳಲ್ಲಿ
ಹರ್ಷದ ಚಿಲುಮೆ ಚಿಮ್ಮಲು
ಬೇಕಿತ್ತು ಈ ಮುಂಗಾರು।।

ಕವಿಯೊಬ್ಬನ
ಸ್ಫೂರ್ತಿ ಮೊಳಕೆಯೊಡೆಯಲು
ಬೇಕಿತ್ತು ಈ ಮುಂಗಾರು ।।

ನೆರೆಮನೆಯ ಮಗು
ಅಂಗಳದಿ ಆಡುತ್ತ ಜಾರಿ ಬೀಳಲು
ಬೇಕಿತ್ತು ಈ ಮುಂಗಾರು ।।

ಗುಡುಗಿನ ಸದ್ದಿಗೆ
ಅವಳು ನಲ್ಲನ ತೆಕ್ಕೆಗೆ ಬೀಳಲು
ಬೇಕಿತ್ತು ಈ ಮುಂಗಾರು।।

ಅಷ್ಟೇ ಅಲ್ಲ , ಧೂಳಿಡಿದು
ಬೆಳ್ಳಗಾಗಿದ್ದ ಕೊಡೆಯು ಕಪ್ಪಗಾಗಲು
ಬೇಕಿತ್ತು ಈ ಮುಂಗಾರು ।।
---
ಗುರುರಾಜ್ ಎಂ ಜೆ

ಭಾನುವಾರ, ಜುಲೈ 21, 2019

ಟ್ರಾಫಿಕ್ ಕಿರಿಕಿರಿ

Image result for traffic jam
ಸೋಮವಾರ ಬಂತೆಂದರೆ ಸಾಕು
ಕಿಕ್ಕಿರಿದ ರಸ್ತೆಗಳು
ವಾರಾಂತ್ಯದ ರಜೆ  ಕಳೆದು ಬಂದ
ಕಿಕ್ಕಿಳಿದ ಜನಗಳು ।।

ಹಸಿರು ಬಣ್ಣಕ್ಕಾಗಿ
ರಣಹದ್ದಿನಂತೆ ಕಾಯುವರು
ಕೆಂಪು ಹಸಿರಾಗಲು ಸಾಕು
ರಾಕ್ಷಸರಂತೆ ಮುನ್ನುಗುವರು।।

ಸಿಕ್ಕ ಸಿಕ್ಕವರನ್ನೆಲ್ಲ ಧೂಷಿಸಿ
ಒಂದಿಬ್ಬರ ಕಡೆ  ಕೈ ಸನ್ನೆ ಮಾಡಿ
ತಾವೇ ಸಂಗೀತ ಸಂಯೋಜಕರೆಂಬಂತೆ
ಹಾರನ್ ಬಾರಿಸುತ್ತ ಓಡಿಸುವರು ಗಾಡಿ ।।

ಎಲ್ಲರಿಗೂ ತಾವೆ
ಮೊದಲಾಗಬೇಕೆಂಬ ತರಾತುರಿ
ಇದೆ ಕಾರಣದಿಂದ ಎಲ್ಲರಿಗೂ
ಆಗುವುದು ಟ್ರಾಫಿಕ್ ಕಿರಿಕಿರಿ।।

ಬೇರೆಲ್ಲವನು ಬೆರಳು ಮಾಡಿ
ತೋರಿಸುವ ಮೊದಲು
ನಾವೆಲ್ಲರೂ ಇದರ ಭಾಗ ಎಂದು ಅರಿತರೆ
ಮಾತ್ರ ಜಗತ್ತಾಗುವುದು ಬದಲು।।
---
ಗುರುರಾಜ್ ಎಂ ಜೆ

ಶುಕ್ರವಾರ, ಜೂನ್ 7, 2019

ಗಾಂಧಿ

Image result for DRESSES LIKE GANDHI
ಏಕೆ ನೀವು ಹಾಗೆ ನೋಡುವಿರಿ
ನೀವು ಎಣಸಿದಂತೆ ಏನೂ  ಇಲ್ಲ
ನಾ ಅವನಂತೆ ಕಾಣುವ ಪಾತ್ರಧಾರಿ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಕಾಲ ಕಳೆದಂತೆ ಮಾಸಿಹುದು
ಆ ತಾತನ ನೆನಪು, ಇದು ಸುಳ್ಳಲ್ಲ
ಅವನ ನೆನಪಿಸುವುದೇ ನನ್ನ ಕಾರ್ಯ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಸತ್ಯ ನುಡಿದ ಸಂತನಾತ 
ಶಾಂತಿ ಸಾರಿದ ಛಲದಂಕ ಮಲ್ಲ
ಆತನ ತತ್ವಗಳನ್ನು ಸಾರುತಿಹೆ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।

ಅಹಿಂಸೆ ಶಾಂತಿಯ  ಪ್ರತೀಕನಾತ
ಆತನ ಸಮನಾರು ಇನ್ನು ಹುಟ್ಟಿಲ್ಲ
ಆತನ ವೇಷದಲಿ ಜೀವನ ನಡೆಸುತಿಹೆ ಹೊರತು
ನಾ ನಿಜವಾದ ಗಾಂಧಿ ಮಹಾತ್ಮನಲ್ಲ ।।
---
ಗುರುರಾಜ್ ಎಂ ಜೆ

ಭಾನುವಾರ, ಜೂನ್ 2, 2019

ಸರೋಜಮ್ಮನ ಖುಷಿ

ಸರೋಜಮ್ಮನ ಖುಷಿ
--------------------------
Image result for happy indian village  lady cartoon
                 Image courtesy : Shutterstock

ಬಾಗಿಲ ಮುಂದೆ ಕಸಗುಡಿಸಿ
ಒಣಗಿದ್ದ ತುಳಸಿಗೆ ನೀರುಣಿಸಿ
ಹೊಸಿಲಿಗೆ ರಂಗೋಲಿಯ ಸಿಂಪಡಿಸಿ
ಖುಷಿಯಲ್ಲಿದ್ದರು ಸರೋಜಮ್ಮ ।।

ಚಕ್ಕುಲಿಯನು ಎಣ್ಣೆಯಲಿ ಇಳಿಸುತ
ಗರಿ ಲಾಡನ್ನು ಕೈಯಲ್ಲಿ ಕಟ್ಟುತ
ತುಪ್ಪ ಮಾಡಲು ಬೆಣ್ಣೆಯನು ಕಾಯಿಸುತ
ಖುಷಿಯಲ್ಲಿದ್ದರು ಸರೋಜಮ್ಮ ।।

ಭಾವಚಿತ್ರಗಳ ಧೂಳನ್ನು ಒರೆಸಿ
ಮೇಜಿನ ಮೇಲಿನ ಬಟ್ಟೆಯನ್ನು ಬದಲಿಸಿ
ಬೇಡದ ವಸ್ತುಗಳ ಅಟ್ಟದಲ್ಲಿ ಕೂರಿಸಿ
ಖುಷಿಯಲ್ಲಿದ್ದರು ಸರೋಜಮ್ಮ ।।

ದೂರದಲಿ ಅಲ್ಲೆಲ್ಲೋ ಗಾಡಿಯ ಶಬ್ದ ಕೇಳಲು
ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ
ಬಾಗಿಲಿನಿ ಬಳಿಗೋಡಿ ನಿಂತು
ಖುಷಿಯಲ್ಲಿದ್ದರು ಸರೋಜಮ್ಮ ।।

ಕೊನೆಗೂ ಆಷಾಡ ಬಂದಿತ್ತಲ್ಲ
ನಮ್ಮೆನೆಯ ನಂದಾದೀಪ ಮತ್ತೆ ಬರುವಳಲ್ಲ
ಒಂದಷ್ಟು ದಿನವಾದರೂ ಮತ್ತೆ ಜೊತೆಗಿರುವಳಲ್ಲ
ಎಂದು ಖುಷಿಯಾಗಿದ್ದರು ಸರೋಜಮ್ಮ ।।

-----
ಗುರುರಾಜ್ ಎಂ ಜೆ
(ಮೊದಲು ಪ್ರಕಟ ಗೊಂಡಿದ್ದು ಟಾಕ್ ಆಫ್ ದಿ ಟೌನ್ ಫೇಸ್ಬುಕ್/ಟ್ವಿಟ್ಟರ್ ನಲ್ಲಿ)

ಭಾನುವಾರ, ಫೆಬ್ರವರಿ 10, 2019

ಅಶೋಕ ಸಾಮ್ರಾಟ

Related image
ನಾನು ,
ನನ್ನ ಸ್ವಾರ್ಥಕೆ ಉಣಬಡಿಸಿದ ಹೋರಾಟವಿದು
ದಯೆ ದಾಕ್ಷಣ್ಯ ಕಟ್ಟಿ
ಎಲ್ಲೋ ಎಸದಂತೆ ದೂರಕೆ 
ಎದುರಿಗೆ ಬಂದವರ
ಕೊಲ್ಲುವುದೇ ಶೌರ್ಯದ ತೋರಿಕೆ ।।

ಆದರೆ
ಏನಿದು ನಾನು  ನೋಡುತ್ತಿರುವುದು
ರಕ್ತದಲಿ ಮಿಂದೆದ್ದ
ರಥ ಬೀದಿಗಳು
ಕಾಲಿಡುವ ದಾರಿಯಲಿ
ಅಡ್ಡಗಟ್ಟಿವೆ  ಭೀಕರ ಶವಗಳು ।।

ಇದು ,
ಗೆಲುವೆ ? ನನ್ನಯ ಗೆಲುವೇ
ಮೂಕ ಜನರ
ಘೋರಿಯ ಮೇಲೆ ಸಿಂಹಾಸನವೇರುವುದು
ಕಳೇಬರಹವೇ ತುಂಬಿದ
ನಾಡಲ್ಲಿ ಕಹಳೆ ಊದುವುದು ।।

ಇಲ್ಲ ,
ಗೆಲುವಲ್ಲ, ಇದು ಕುಹಕ ಮಾಡುತ್ತಿರುವ ಸೋಲು ,
ನೋವು,ಆಕ್ರಂದನ ಕೇಳಿ
ಚಿವುಗುಡುತ್ತಿವೆ ನನ್ನ ಕರ್ಣಗಳಿಂದು
ನಗುವೇ  ಮೂಡಿಸದ ಗೆಲುವು
ಅದು ಸತ್ತ ಕೊಳೆತ ಶವವೆಂದು ।।

ಸಾಕು ,
ಸಾಕು ನನಗೆ ಈ
ಯುದ್ಧ ,ಚೀರಾಟ , ಹೋರಾಟ
ನಾನಿಂದು ಅಶೋಕ ದಲಿ  ಆ ಶೋಕವನ್ನಳಿಸಿ
ಪ್ರ ಬುದ್ಧ ನಾಗಲು ಹೊರಟ ಸಾಮ್ರಾಟ ।।

--
ಗುರುರಾಜ
(ಕಳಿಂಗ ಯುದ್ಧದ ನಂತರದ ಚಿತ್ರಣ)

ಸೋಮವಾರ, ಡಿಸೆಂಬರ್ 31, 2018

ನನ್ನ ಹೊಸ ವರ್ಷ







ಜಗತ್ತೇ ಮದಿರೆಯ ಗುಂಗಲ್ಲಿ
ಮುಳುಗಿರಲು
ನಾ ಇಂದು ಬರಬೇಕಿದ್ದ 
ಪ್ಲoಬರ್ ರಾಮಣ್ಣ ಯಾಕೆ
ಬರಲಿಲ್ಲ ಎಂದು ಯೋಚಿಸುತ್ತಿದ್ದೆ||

ಹೊಸ ವರುಷದ ನೆಪದಲ್ಲಿ
ಎಲ್ಲರು ರಜೆಯನ್ನು ಸವಿದಿರಲು
ನಾ ಬಟ್ಟೆಗೆ ತಾಕಿದ 
ಕರಿ ಬಣ್ಣದ 
ಕಲೆಯನ್ನ  ತಿಕ್ಕುತ್ತಿದ್ದೆ||

ಕೆಲವರು ಗೋವಾದ ಬೀಚಲ್ಲಿ 
ಬರ್ಮುಡಾ ತೊಟ್ಟು
ಸೆಲ್ಫಿ ತೆಗೆದಿರಲು
ನಾನಿಲ್ಲಿ ಕೇರಳದ ಲುಂಗಿ ತೊಟ್ಟು
ಅಗ್ನಿಸಾಕ್ಷಿ ನೋಡುತ್ತಿದ್ದೆ||

ಎಲ್ಲೆಡೆ ಹರ್ಷದ ಚೀರಾಟ 
ಪಟಾಕಿಗಳ ಶಬ್ಧ ಮುಗಿಲು ಮುಟ್ಟಲು 
ನಾ ಹೊದಿಕೆಯ ಸಂಧಿಯಲ್ಲಿ 
ಸುಯ್ ಎಂದು ಬೀಸುತ್ತಿದ್ದ
ಗಾಳಿಯ ಮೂಲ ಹುಡುಕುತ್ತಿದ್ದೆ ||

ಮಾರನೆಯ ದಿನ ಕುಡಿದ ಮತ್ತಲ್ಲಿ ಬೆಳಗ್ಗೆ
ಕೆಲವರು ಹತ್ತಾದರು ಏಳದಿರಲು 
ನಾ ಆರಕ್ಕೆ ಎದ್ದು ಅದ್ಯಾವುದೊ 
ಬ್ಯಾಂಕಿನ ಕ್ಯಾಲೆಂಡರ್ ಗೋಡೆಗೆ 
ತಗಲಾಕಿ ಹೊಸ ವರ್ಷ ಆಚರಿಸಿದ್ದೆ ||

------
ಗುರುರಾಜ್ ಎಂ ಜೆ 

ಶನಿವಾರ, ಜೂನ್ 2, 2018

ಚಾರಣಿಗ

Image result for trekking perdon

ಸಣ್ಣವನಾಗಿದ್ದಾಗಿಂದಲೂ
ನಿನ್ನ ನೋಡಿದಾಗ ಅನ್ನಿಸುತ್ತಿದದ್ದು
ನಿನ್ನ ಶಿಖರವೊಮ್ಮೆ ಏರಬೇಕು
ಆ ಯಶಸ್ಸಿನ ತುತ್ತ ತುದಿಯಲ್ಲಿ ನಿಂತು
ಜಗತ್ತನ್ನು ಒಮ್ಮೆ ಕಾಣಬೇಕು ।

ಬೆಳೆಯುತ್ತ ಬೆಳೆಯುತ್ತ ಆ ಆಸೆಗಳಿಗೆ
ಒಂದೆರಡು ರೆಕ್ಕೆ ಪುಕ್ಕ ಸೇರಿಸಿ
ಒಂದಿಷ್ಟು ಅಹಂಕಾರದ ಜೊತೆಗೆ ಹುರುಪನ್ನು ಬೆರೆಸಿ
ಚಾರಣ ಮಾಡಲು ಕೊನೆಗೂ
ಚಾರಣಿಗನಾಗಲು ಹೊರಟವ ನಾನು ।

ಒಂದಿಷ್ಟು ದೂರ ಏರಿರಬಹುದೇನೋ
ಅಷ್ಟರಲ್ಲೇ ನನ್ನ ಬಣ್ಣ ಬಯಲಾಯಿತು
ಏದುಸಿರು ತೆಗೆದು ಕೊಳ್ಳಲಾಗದೆ
ಏರಲಾಗದೆ ಇಳಿಯಲಾಗದೆ ಅಲ್ಲೇ ಕೂತಾಗ
ನನಗೆ ಏನೋ ಒಂದು ಸೋಲಿನ ಅನುಭವ ।।

ಆದರೂ ಅಹಂ ನ ಮಾತು ಕೇಳಿ
ಮತ್ತೆ ಏರಲು ಮತ್ತದೇ ಸೋಲಿನ ಪಾಠ
ಕೊನೆಗೆ ಸ್ವಲ್ಪ ಯೋಚಿಸಿದ ಮೇಲೆ
ಅಲ್ಲೇ ಅಹಂಕಾರದ ಮೂಟೆಯನ್ನು
 ಕೆಳಗಿಳಿಸದ ಮೇಲೆ ।

ಏರಿದೆ ಏನೋ ಹೊಸ ಉತ್ಸಾಹದಲಿ
ಶಿಖರವನ್ನು ತಲುಪಿ ನೋಡಲು ಏನೋ ಖುಷಿ
ಸಾಧನೆಯ ಶಿಖರವನ್ನು ತಲುಪಿದ ನಾನು
ಚಾರಣಿಗ ಇರಬಹುದು
ಆದರೂ ನನ್ನವರನ್ನೆಲ್ಲ ಹಿಂದೆ ಬಿಟ್ಟು
ಮೇಲೆ ಬಂದ ನಾನು ಇಂದು ಒಬ್ಬ ಒಬ್ಬಂಟಿಗ ।।

--
ಗುರುರಾಜ ಎಂ ಜೆ