ಪುಟಗಳು

ಸೋಮವಾರ, ಜುಲೈ 2, 2012

ತಿರಸ್ಕಾರ


ಒಲ್ಲದ ಮನಸ್ಸು , ನಿಲ್ಲದ ವಯಸ್ಸು
ಕನಸಿನ ಬೆಂಬಲ ,ಮನೆಯವರ ಹಂಬಲ 
ಎಲ್ಲವೂ ಕೂಡಿ ಕರೆದೊಯ್ದವು ಅವಳೂರಿಗೆ
ನನ್ನ  ಮಡದಿಯಾಗ ಬೇಕಿದ್ದವಳ ತವರೂರಿಗೆ||

ತಳಿರು ತೋರಣ ರಂಗೋಲಿಗಳ ಸ್ವಾಗತ 
ಮಕ್ಕಳು ಕುಣಿದವು ಅಕ್ಕನ ಗಂಡ ಬಂದನೆನ್ನುತ 
ಅವಳ ಮನೆಯಲ್ಲಿ ಮುಗಿಲು ಮುಟ್ಟಿತ್ತು ಸಂಭ್ರಮ 
ನನ್ನ ಮೂಗಿಗೆ ಬಡಿದಿತ್ತು ಕೇಸರಿಬಾತಿನ ಘಮ ಘಮ||

ಎದೆಯಲ್ಲಿ ಅವಳ ಕಲ್ಪನೆ ನಾಲಿಗೆಗೋ ಉಪ್ಪಿಟ್ಟಿನ ಯೋಚನೆ 
ಗೆಜ್ಜೆಯ ಮೇಳದೊಂದಿಗೆ ಅವಳು ಬಂದಳು ಮೆಲ್ಲನೆ 
ಕಂಡೊಡನೆಯೆ ಮೈಯೆಲ್ಲಾ ವಿದ್ಯುತ್ ಹರಿದಾಟ 
ಎಂದಿಗೂ ಮರೆಯಲಾರೆ ಅವಳ ಆ ವಾರೆನೋಟ ||

ನಮ್ಮಿಬ್ಬರನು ಕಳುಹಿಸಿ ಕೊಟ್ಟರು ಮಹಡಿಯ ಮೇಲೆ 
ಹಂಚಿಕೊಳ್ಳಲು ತಂತಮ್ಮ ಮನಸಿನ ಓಲೆ 
ತೆರೆದಿಟ್ಟಳು ಬಾಳ ಪುಟವ ಆ ಚೆಲುವೆ 
ಕಂಬನಿಯೊಂದಿಗೆ ಹೇಳಿದಳು ಇಷ್ಟವಿಲ್ಲ ನನಗೀ ಮದುವೆ||

ಕಾರಣ ಕೇಳಿದಾಗ ಕೊಟ್ಟಳವಳು ಉತ್ತರ 
ನೀವು ಬೇಡುವ ಹೃದಯವೇ ಇಲ್ಲ ನನ್ನ ಹತ್ತಿರ 
ನನ್ನ ಹೃದಯ ಕೋಟೆಗೆ ಬೇರೊಬ್ಬನು ಹಾಕಿರುವನು   ಕನ್ನ
ಅವನ ಬಿಟ್ಟು ಬಾಳಲಾರೆ ಕ್ಷಮಿಸಿ ಬಿಡಿ ನನ್ನ ||

ಆ ಕ್ಷಣದಲ್ಲಿ ನೆನಪಾದವಳು ನನ್ನ ಮೊದಲ ಪ್ರೀತಿ 
ಹಣದ ಹಿಂದೆ ಹೋದವಳು ಇರಬಾರದಿತ್ತ ಇವಳ ರೀತಿ 
ಚೆನ್ನಾಗಿ ಬಾಳಿ ಎಂದು ಹರಸಿ ಹೇಳಿದೆ ಅವಳಿಗೆ ನಮಸ್ಕಾರ 
ಮನಸ್ಸು ಕೂಗಿ ಹೇಳಿತು ಯೋಚಿಸದಿರು ಅಣ್ಣ ಹೊಸತಲ್ಲ ನಿನಗೀ ತಿರಸ್ಕಾರ||

--ಗುರುರಾಜ 
(Techmahindra ಕಾವ್ಯ ಸುಧೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕವಿತೆ)

1 ಕಾಮೆಂಟ್‌: